Thursday, December 30, 2010

ಅವರ ಹಿಂಸೆಗೆ ನನ್ನಲ್ಲಿ ಉತ್ತರವಿರಲಿಲ್ಲ

ನ್ನ ಕಳೆದೆರಡು ಅಂಕಣದಲ್ಲಿ  ಅನ್ಯಾಯದ ಕುಲುಮೆಯಲ್ಲಿ ಬೆಂದ ಹೆಣ್ಣು ಮಕ್ಕಳಿಬ್ಬರ ಕಥೆ ಹೇಳಿದ್ದೆ. ಈಗ  ಮತ್ತೊಂದು ಕಥೆ ಹೇಳುತ್ತಿದ್ದೇನೆ. ಹೆಣ್ಣು ಮುಂದುವರಿದರೂ ಆಕೆಯ ಮೇಲಿನ ಅನ್ಯಾಯಗಳಿನ್ನೂ ಕೊನೆಯಾಗಲಿಲ್ಲ. ಈಕೆಯ ಹೆಸರು ಸುಲೇಖಾ ಮಹಿಪಾಲ್ . ಊರು ಡೆಹ್ರಾಡೂನ್. ಹುಟ್ಟಿದ್ದು ಜಾಡಮಾಲಿ ಕುಟುಂಬದಲ್ಲಿ. ಅಪ್ಪ ಅಮ್ಮನನ್ನು ವಿಷ ನೀಡಿ ಕೊಂದಾಗ ಸುಲೇಖಾಳಿಗೆ ಇನ್ನೂ ೧೩ ವರ್ಷ. ಅಪ್ಪನಿಂದ ದೂರಾದ ಸುಲೇಖಾಳ ಬದುಕು ಪ್ರತಿಕ್ಷಣವೂ ಶೋಷಣೆಗೊಳಗಾಯಿತು. ಭರವಸೆ ಕಳೆದುಕೊಂಡ ಅವಳ ಬದುಕಿನಲ್ಲಿ ಮತ್ತೆ ಭರವಸೆ ತುಂಬಿದ್ದು  ಸಮಾಧಾನ್ ಎಂಬ ಸರ್ಕಾರೇತರ ಸಂಸ್ಥೆ ಮತ್ತು ತನ್ನ  ಭಾ ಪತಿ. ಈಗ ಅನ್ಯಾಯದ ವಿರುದ್ಧ ಸುಲೇಖಾ ಹೋರಾಟಕ್ಕೆ ಭಾ ಪತಿಯೂ ಕೈ ಜೋಡಿಸಿದ್ದಾರೆ. 



ಅಮ್ಮನನ್ನು ಉಳಿಸಿಕೊಳ್ಳಲು ಆಕೆಯಿಂದ ಸಾಧ್ಯವಾಗಲಿಲ್ಲ. ಅಪ್ಪನ ರೌದ್ರವತಾರೆದುರು ಮಗಳು ಅಸಹಾಯಕಳಾಗಿ ಮೌನವಾಗಿದ್ದಳು. ಆಕೆಗಿನ್ನೂ ೧೩ ವರ್ಷ. ಆ ಪುಟ್ಟ ಹೆಣ್ಣು ಮಗಳ ಎದುರು ಅಮ್ಮ ಹತಳಾದಳು.
ಆ ದಿನ ಆತ ತನ್ನ ಪತ್ನಿಗೆ ವಿಷ ಕುಡಿಸಲು ಒಂದೇ ಸಮನೆ ಒತ್ತಾಯಿಸುತ್ತಿದ್ದ. ಆಕೆ ಒಪ್ಪಲಿಲ್ಲ. ಒಪ್ಪದಿದ್ದಾಗ ಬಾಸುಂಡೆಗಳು ಬರುವಂತೆ ಹೊಡೆದ. ಕೊನೆಗೆ ಕುಡಿದೇ ಬಿಟ್ಟಳು. ವಿಷ ಕುಡಿದ ಎರಡೇ ಗಂಟೆಗಳಲ್ಲಿ ಆ ತಾಯಿ ಅಸುನೀಗಿದಳು. ಆ ಮನುಷ್ಯ ಊರಲೆಲ್ಲಾ ತನ್ನ "ಪತ್ನಿ ಆತ್ಮಹತ್ಯೆ ಮಾಡಿಕೊಂಡಳೆಂದು'' ಡಂಗುರ ಸಾರಿದ. ಅಕ್ಕಪಕ್ಕದವರೆಲ್ಲಾ ಅಹುದಹುದೆಂದರು! ಅಪ್ಪನ ಕ್ರೌರ್ಯಕ್ಕೆ ಆ ಹೆಣ್ಣು ಮಗಳು ಮೂಕಸಾಕ್ಷಿಯಾಗಿದ್ದಳು.

 ಆ ಹೆಣ್ಣು ಮಗುವೇ ಇಂದು ಡೆಹ್ರಾಡೂನ್‌ನ ಖಾಸಗಿ ಕಾಲೇಜೊಂದರಲ್ಲಿ ಕಾನೂನು ಪದವಿ ಓದುತ್ತಿರುವ ಮತ್ತು ಸಮಾಧಾನ್ ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ನೂರಾರು ಹೆಣ್ಣುಮಗಳಿಗೆ ಆಸರೆಯಾಗುತ್ತಿರುವ ಸುಲೇಖಾ ಮಹಿಪಾಲ್.

ಸುಲೇಖಾ ಅವರದು ಜಾಡಮಾಲಿ ಕುಟುಂಬ. ಅಪ್ಪನಿಗೆ ಬೇರೊಬ್ಬಳೊಂದಿಗೆ ಜೊತೆ ಸಂಬಂಧವಿತ್ತು. ಅದೇ ಕಾರಣಕ್ಕಾಗಿ ಆತ ಸುಲೇಖಾಳ ಅಮ್ಮನನ್ನು  ಕೊಂದ. ಅಲ್ಲಿಂದ ಸುಲೇಖಾ ಸಾಗಿದ್ದು ಹರಿಯಾಣದಲ್ಲಿರುವ ತನ್ನ ಅಜ್ಜನ ಮನೆಗೆ. ಅಂದರೆ, ಅವಳ ಅಮ್ಮನ ಅಪ್ಪನ ಮನೆಗೆ. ಅಜ್ಜನ ಮನೆಯಲ್ಲೇ ಪ್ರಾಥಮಿಕ ಶಿಕ್ಷಣವೂ ಆಯಿತು. ಆದರೆ, ಸುಲೇಖಾ ಬದುಕು ಅಲ್ಲಿ 'ಗುರಿ' ತಲುಪಲಿಲ್ಲ.  ಮರಳಿ ಅಪ್ಪನ ಹುಡುಕಿ ಬಂದಳು. ಯಾರೂ ಇಲ್ಲದ ಬದುಕಿಗೆ ಮತ್ತೆ ಅಪ್ಪ ಬೇಕಾದ. ಮಲತಾಯಿ ಬೇಕಾದಳು. ತನ್ನ ಒಡಹುಟ್ಟಿದ ತಮ್ಮಂದಿರ ಬದುಕು ನೋಡಬೇಕಾಯಿತು. ಅಪ್ಪ ಬಹಳ ದಿನ ಆಸರೆಯಾಗಲಿಲ್ಲ. "ಬೆಳಕು ಹುಡುಕಿ ಬಂದ ದಾರಿಯಲ್ಲಿ ಬೆಳಕಿರಲಿಲ್ಲ''

ಅಂದು ಏಪ್ರಿಲ್ ೧೮, ೨೦೦೮.

ಯಾರದೋ ಮಾತು ಕೇಳಿ ಸರ್ಕಾರ ಸಂಸ್ಥೆಯೊಂದರಲ್ಲಿ ಕೆಲಸ ಹುಡುಕಿ ಹೊರಟಳು. ಆದರೆ, ಅಲ್ಲಿ ನಡೆದಿದ್ದು ಮಹಾ ದುರಂತ. ತಂದೆ ಇದ್ದೂ ಆಕೆಗಿಲ್ಲ, ತಾಯಿ ಅಪ್ಪನಾದವನ ಕ್ರೌರ್ಯಕ್ಕೆ ಬಲಿಯಾದಳು. ತಮ್ಮಂದಿರು ಅವರ ದಾರಿ ಹಿಡಿದಿದ್ದರು. ಸುಲೇಖಾ ಸುತ್ತ  ಬದುಕಿನ ಸಂಬಂಧಗಳೇ ಇರಲಿಲ್ಲ. ಸರ್ಕಾರಿ ಕಚೇರಿಯೊಂದಕ್ಕೆ ಸಂದರ್ಶನಕ್ಕೆಂದು ಹೋದಾಗ ಅದೇ ಸ್ಥಳದಲ್ಲಿ ತನ್ನ ಕಸಿನ್ ಸೇರಿದಂತೆ ನಾಲ್ಕು ಜನರಿಂದ ಸಾಮೂಹಿಕ ಅತ್ಯಾಚಾರಕ್ಕೀಡಾದಳು! ಅಷ್ಟಕ್ಕೇ ನಿಲ್ಲಲಿಲ್ಲ. ಆ ದೃಶ್ಯವನ್ನು ವಿಡಿಯೋ ಟೇಪ್ ಮಾಡಿದರು. ಆ ಶಾಕ್‌ನಿಂದ ಹೊರಬರಲು ಅವಳಿಗೆ ದಿನ ತಿಂಗಳುಗಳೇ ಬೇಕಾದವು.

ಅಪ್ಪನೇ ಮಗಳನ್ನು ಹೊರದೂಡಿದ!
ಆ ಕ್ಷಣ ಅವಳಿಗೆ ನೆನಪಾಗಿದ್ದು ಜನ್ಮ ಕೊಟ್ಟ ಅಪ್ಪ. ಬಿಕ್ಕುತ್ತಾ ತನ್ನ ಕಥೆಯನ್ನು ಅಪ್ಪನೆದುರು ಹೇಳಿದಳು. ಒಂದಷ್ಟು ಹೊತ್ತು ಅಲ್ಲಿ ನಿಲ್ಲಲು ಅವಳಿಗೆ ಅವಕಾಶವಿರಲಿಲ್ಲ. ಸತ್ಯಕ್ಕೆ, ನ್ಯಾಯಕ್ಕೆ ಬೆಲೆ ಇರಲಿಲ್ಲ. ಯಾರದ್ದೋ ತಪ್ಪು, ಅಪ್ಪನೆದುರು ಮಗಳು ಅಪರಾಧಿಯಾದಳು.  ಆತನೂ ಪುರುಷನೇ! ಏಕ್ ದಂ ಮಗಳನ್ನು ಹೊರಗೆ ದೂಡಿದ.

ಮನೆ ತೊರೆದು ಹೊರಟ ಸುಲೇಖಾಗೆ ಕಣ್ಣಿಗೆ ಬಿದ್ದಿದ್ದು  ಡೆಹ್ರಾಡೂನ್ ನಗರದಲ್ಲಿ  ಸಮಾಧಾನ್ ಎಂಬ ಸರ್ಕಾರೇತರ ಸಂಸ್ಥೆ  ಹಾಕಿದ್ದ ದೊಡ್ಡ ಬೋರ್ಡು. ಅಲ್ಲಿ ಸಹಾಯವಾಣಿ ನಂ ಬರೆಯಲಾಗಿತ್ತು. ಅದನ್ನೇ ಸುಲೇಖಾ ಹೇಳುವುದು ಹೀಗೆ: “ಅಪ್ಪ ಮನೆಯಿಂದ ಹೊರ ಹಾಕಿದ. ಭರವಸೆ ಹುಡುಕಿ ಅಜ್ಜನ ಮನೆಗೆ ಹೋದೆ. ಅಲ್ಲಿ ಹೆಣ್ಣು ಮಕ್ಕಳು ಒಬ್ಬೊಬ್ಬರಾಗಿ ನಡೆದಾಡುವ ಸ್ಥಿತಿ ಇರಲಿಲ್ಲ. ಅಲ್ಲಿಂದ ತಮ್ಮಂದಿರಿಗಾಗಿ ಮತ್ತೆ ಅಪ್ಪನ ಮನೆಗೆ ಬಂದೆ. ಆಗ ಸಣ್ಣ ಭರವಸೆ ಇತ್ತು. ಆದರೆ, ನಂತರ ನಡೆದ ಘಟನೆಗಳಿಂದಾಗಿ ಒಂಚೂರು ಭರವಸೆಯೂ ನನ್ನಲ್ಲಿ ಉಳಿದಿಲ್ಲ. ಆದರೆ, ಆ ದೊಡ್ಡ ಬೋರ್ಡ್ ನೋಡಿ ಮತ್ತೆ ಬದುಕುವ ಆಸೆ ಹುಟ್ಟಿತು. ತಕ್ಷಣ ನಾನು ಆ ಸಂಸ್ಥೆಗೆ ಭೇಟಿ ನೀಡಿ ನನಗೆ ನೆರವಾಗಲು ಬೇಡಿಕೊಂಡೆ” ಅದರಂತೆ ಸಮಾಧಾನ ಸಂಸ್ಥೆ ಆಕೆಗೆ ನೆರವಾಯಿತು. ಈಗ ಆಕೆ ತನ್ನ ವಿರುದ್ಧ ನಡೆದ ಅನ್ಯಾಯಗಳ ವಿರುದ್ಧ ಕೋರ್ಟ್ ಹತ್ತಿದ್ದಾಳೆ.  
 ಆದರ್ಶ ಪತಿರಾಯ
ಇದಕ್ಕೆ ಅವಳಿಗೆ ನೆರವಾಗಿತ್ತು ಅವಳ ಭಾ ಪತಿ. ಅಚ್ಚರಿ ಎಂದರೆ, ಹೆಂಡತಿ ಬೇರೊಬ್ಬ ಗಂಡನೊಂದಿಗೆ ಮಾತನಾಡಿದರೆ ಅಥವಾ ತನ್ನ ಹೆಂಡತಿ ಪರ ಪುರುಷನಿಂದ ಅತ್ಯಾಚಾರಗೊಳಗಾದರೆ ಯಾವ ಗಂಡನೂ ಸಹಿಸುವುದು ಕಷ್ಟವೇ. ಇಂಥ ಪ್ರಕರಣಗಳಿಗಾಗಿ ವಿಚ್ಚೇದನ ನೀಡಿದ ಅದೆಷ್ಟೋ ಗಂಡಸರನ್ನು ನಾವು ನೋಡಿದ್ದೇವೆ. ಆದರೆ, ಈತ ಹಾಗೇ ಮಾಡಲಿಲ್ಲ. ಸುಲೇಖಾಳ ಬದುಕಿನ ಪ್ರತಿ ಹೋರಾಟಗಳಿಗೂ ಧೈರ್ಯ ತುಂಬುತ್ತಿದ್ದಾನೆ. ಆತನೂ ಎಂಬಿಎ ವಿದಾರ್ಥಿ. ಒಂದು ರೀತಿಯಲ್ಲಿ ಆದರ್ಶ ಪತಿ. ಸದ್ಯದಲ್ಲೇ ಸುಲೇಖಾ ಆತನ ಜೊತೆ ಸಪ್ತಪದಿ ತುಳಿಯಳಿದ್ದಾಳೆ.

ಮತ್ತೆ ಭರವಸೆ ಹುಟ್ಟಿದೆ
""ನನ್ನಂಥವರು ಈ ದೇಶದಲ್ಲಿ ಸಾಕಷ್ಟು ಹೆಣ್ಣು ಮಕ್ಕಳಿರಬಹುದು. ಇಂಥ ಅನುಭವಗಳು ನಮ್ಮ ದೇಶದಲ್ಲಿ ಸಾಮಾನ್ಯ. ಹಾಗಂತ ನನ್ನ  ಸುತ್ತ ಇರುವ ಅಪ್ಪ, ತಮ್ಮ...ಮುಂತಾದ ಸಂಬಂಧಗಳಿಂದ ಕಳಚಿಕೊಂಡು ದೂರ ಇರಬೇಕು ಅಂತ ಅನಿಸುವುದೇ ಇಲ್ಲ. ಅವರಿಗೆ ನನ್ನ ಬಗ್ಗೆ ಏನೇ ಅಭಿಪ್ರಾಯಗಳಿರಬಹುದು. ಆದರೆ ಅವರು ನನ್ನ ಬದುಕಿನ ಭಾಗ'' ಎನ್ನುವ ಸುಲೇಖಾ, ತನ್ನ ಪತಿಯ ಕುರಿತು ಹೆಮ್ಮೆಯಿಂದ ನುಡಿಯುವುದು ಹೀಗೆ: “೧೩ ವರ್ಷದಿಂದ ಈವರೆಗೆ ನಾನು ಕಂಡಿದ್ದು ಬರೇ ನೋವುಗಳೇ. ಅದು ಬರೇ ಪುರುಷನಿಂದಲೇ ನನ್ನ ಬದುಕು ಅನ್ಯಾಯಗೊಳಗಾಗಿತ್ತು. ಪುರುಷರ ಕುರಿತೇ ನಂಬಿಕೆ ಕಳೆದುಕೊಂಡಿದ್ದೆ. ಅವರ ಹಿಂಸೆಗೆ ನನ್ನಲ್ಲಿ ಉತ್ತರವಿರಲಿಲ್ಲ. ಆದರೆ, ಯಾವಾಗ ನನ್ನನ್ನು ಮದುವೆಗೆ ಒಪ್ಪಿದ್ದಾರೋ ಅಂದಿನಿಂದ ನನ್ನಲ್ಲಿ ಭರವಸೆ ಹುಟ್ಟಿದೆ. ಸದ್ಯದಲ್ಲೇ ನಮ್ಮ ಮದುವೆ. ಆದರೆ, ಅನ್ಯಾಯದ ವಿರುದ್ಧ  ನಮ್ಮ ಹೋರಾಟ ನಿಲ್ಲುವುದಿಲ್ಲ” ಎನ್ನುವ ಗಟ್ಟಿಮಾತು.

ಇಂದು ಸಮಾಧಾನದಲ್ಲಿ ತನ್ನಂತೆ ನೊಂದ ನೂರಾರು ಹೆಣ್ಣು ಮಕ್ಕಳಿಗೆ ಸುಲೇಖಾ ಆಸರೆಯಾಗುತ್ತಿದ್ದಾಳೆ. ಬದುಕಿನಲ್ಲಿ ಕಂಡ ಕಷ್ಟಗಳು ಅವಳ ಬದುಕನ್ನು ರೂಪಿಸಿವೆ.  ಅನ್ಯಾಯದ ಎದುರು ಬದುಕು ಬೆತ್ತಲಾದರೂ ಅವಳು ಧೃತಿಗೆಡಲಿಲ್ಲ. ಅವಳೆದುರು ಸಹಾಯ ಹಸ್ತ ಚಾಚಿ ಬಂದವರಿಗೆ ಅವಳು ಹೇಳೋದಷ್ಟೇ: ಗಂಡಸರ ಗರಡಿಯಲ್ಲಿ  ‘ಕಳೆದು’ಹೋದರೂ, ಬದುಕಿನಲ್ಲಿ ಆಶಾವಾದಗಳಿರಲಿ”. ಸುಲೇಖಾ ಒಂದು ರೀತಿಯಲ್ಲಿ ಬೆಂಕಿಯಲ್ಲಿ ಅರಳಿದ ಹೂವು!
ಪ್ರಕಟ: http://www.hosadigantha.in/epaper.php?date=12-30-2010&name=12-30-2010-7

Monday, December 27, 2010

ಕ್ಷಮಿಸಿ,ನಿಮ್ಮ ನೆಮ್ಮದಿಯನ್ನು ಕಲಕುವ ಉದ್ದೇಶ!

ನನ್ನ ಕಣ್ಣಿನಲ್ಲಿ ಕಣ್ಣೀರು ಎಂದೋ ಬತ್ತಿಹೋಗಿತ್ತು. ಅನ್ಯಾಯದ ವಿರುದ್ಧದ ದನಿ ಕುಗ್ಗಿಹೋಗಿತ್ತು. ನನಗೆ ಈಗ ದನಿ ಇಲ್ಲ. ಒಂದು ವೇಳೆ ದನಿ ಇದ್ದರೂ ಕೇಳುವ ಕಿವಿಗಳು ನನ್ನ ಬಳಿ ಇಲ್ಲ. ಅಪ್ಪ-ಅಮ್ಮನ ನೆನಪಾಗುತ್ತದೆ. ಲಂಡನ್‌ನ ನೆನಪುಗಳು ಆಗಾಗ ಸುಳಿಯುತ್ತವೆ. ಬದುಕು ಬೇಡ ಅನಿಸುತ್ತಿದೆ. ಆದರೂ, ನನ್ನ ಕೈಯಾರೆ ನಾನು ಕೊಲೆಯಾಗ ಬಯಸಲಾರೆ. ಎಲ್ಲವನ್ನೂ ಮರೆಯೋಕೆ ಕುಡಿತವನ್ನು ಬದುಕಾಗಿಸಿಕೊಂಡಿದ್ದೇನೆ.
ಆನೆ, ಹುಲಿ, ಸಿಂಹಗಳ ಅಂಗಾಂಗಳನ್ನು  ಪ್ರದರ್ಶನಕ್ಕಿಟ್ಟರೆ ದುಡ್ಡು ಕೊಟ್ಟು ನೋಡಲು ಖುಷಿಪಡ್ತೀವಿ. ಆದರೆ, ಒಬ್ಬ ಹೆಣ್ಣಿನ ಅಂಗಾಂಗಳನ್ನು ಪ್ರದರ್ಶನಕ್ಕಿಟ್ಟರೆ...ನೋಡುವುದು ಬಿಡಿ, ಕೇಳಲು ಅಸಹ್ಯವಾಗುತ್ತದೆ. ಆದರೆ, ಇಂಥದ್ದೊಂದು ನೈಜ ಘಟನೆ ಎರಡು ದಶಕಗಳ ಹಿಂದೆ ನಡೆದಿತ್ತು. ಇಂದಿಗೂ ದಕ್ಷಿಣ ಆಫ್ರಿಕಾದ ನೂರಾರು ಹೆಣ್ಣು ಮಕ್ಕಳು ಈ ಕಥೆಯನ್ನು ನೆನೆಸಿಕೊಂಡು ಕಣ್ಣೀರು ಹಾಕುತ್ತಾರೆ.

                              *****
ನನ್ನ ಹೆಸರು ಸಾರಾ. ಹುಟ್ಟಿದ್ದು ೧೭೮೯ರಲ್ಲಿ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ. ನಾನು ಎದ್ದು ನಡೆಯುವ ಹೊತ್ತಿಗೆ ಅಪ್ಪ-ಅಮ್ಮನನ್ನು ಕಳೆದುಕೊಂಡಿದ್ದೆ. ಅವರು ಬಲಿಯಾಗಿದ್ದೂ ಬಡತನಕ್ಕೇ! ಇಂದು ನನ್ನೆದುರು ಅವರ ಮುಖವೂ ಅಸ್ಪಷ್ಟ. ಹಿಂದೆ-ಮುಂದೆ ಯಾರಿಲ್ಲ. ಒಬ್ಬಳೇ ಮಗಳು. ಒಂದಷ್ಟು ದಿನ ಸಂಬಂಧಿಕರ ಆಶ್ರಯದಲ್ಲಿ ಬೆಳೆದೆ. ಆದರೂ, ಅಲ್ಲಿ ನನ್ನ ಬದುಕಿರಲಿಲ್ಲ. ನಮ್ಮೂರಿನ ಪಕ್ಕದ ಡಚ್ ರೈತರ ಮನೆಯಲ್ಲಿ ಜೀತದಾಳಾಗಿ ಸೇರಿಕೊಂಡೆ. ಆಗಿನ್ನೂ ಹರೆಯಕ್ಕೆ ಬಂದ ವಯಸ್ಸು ಜಗತ್ತಿನ ಆಗುಹೋಗುಗಳನ್ನು ತಿಳಿಯಬಲ್ಲವಳಾಗಿದ್ದೆ. ಬಿಳಿಯರು ನಮ್ಮ ಜನಾಂಗದ ವಿರುದ್ಧ ನಡೆಸುತ್ತಿದ್ದ ಅನ್ಯಾಯಗಳ ಕುರಿತು ಕೇಳಿದ್ದೆ. ಎಲ್ಲವೂ ನನ್ನೊಡಲಲ್ಲಿ ಮೌನವಾಗಿದ್ದವು.


ಬೀದಿ-ಬೀದಿಯಲ್ಲಿ ಬೆತ್ತಲಾದೆ!
ಆ ಡಚ್ ರೈತರ ಮನೆಯಲ್ಲಿ ನಿತ್ಯವೂ ಬೆನ್ನು ಬಗ್ಗಿಸಿ ದುಡಿಯಬೇಕು. ಹೊತ್ತಲ್ಲದ ಹೊತ್ತಿನಲ್ಲಿ ಹೊಟ್ಟೆಗೆ ತುತ್ತು. ಭವಿಷ್ಯಕ್ಕೆ ಸಂಪಾದನೆಯ ದಾರಿ ಬೇಕಿತ್ತು. ಯಾರೋ ಲಂಡನ್‌ನಲ್ಲಿ ಕೆಲಸ ಕೊಡಿಸುತ್ತೇನೆಂದು ಹೇಳಿದಾಗ ಸರಿ ಎನಿಸಿತ್ತು. ಆಗ ನನಗೆ ೨೧ ವರ್ಷ. ಹಿಡಿ ಕನಸುಗಳೊಂದಿಗೆ ಲಂಡನ್‌ಗೆ ಬಂದಿಳಿದಿದ್ದೆ! ಅಲ್ಲಿನ ಸರ್ಕಸ್ ಕಂಪನಿಯೊಂದರಲ್ಲಿ ನನ್ನ ಬರಮಾಡಿಕೊಂಡರು. ಆಗ ಅಲ್ಲಿ ಅವರು ನೀಡಿದ್ದ ಆಫರ್ ಕೇಳಿ ಕಂಪಿಸಿದೆ. "ಆ ಸರ್ಕಸ್‌ನಲ್ಲಿ  ನಾನು ಬೆತ್ತಲೆಯಾಗಿ ಪ್ರದರ್ಶನ ನೀಡಬೇಕಿತ್ತು''. ಬಿಳಿಯರ ದರ್ಬಾರಿನ ಎದುರು ನನ್ನ ಮಾತುಗಳಿಗೆ ಬೆಲೆ ಇರಲಿಲ್ಲ. ನಾನೊಲ್ಲೆ ಎಂದಾಗ ಬೆನ್ನಿನಲ್ಲಿ ಬಾಸುಂಡೆಗಳು ಮೂಡಿದವು. ಲಂಡನ್‌ನ ಬೀದಿ-ಬೀದಿಗಳಲ್ಲಿ ಬೆತ್ತಲೆಯಾದೆ. ಅವರು ಹೇಳಿದಂತೆ ನನ್ನ ಕೆಲಸ. ಹೆಣ್ಣಾಗಿ ಹುಟ್ಟಿದ್ದೇ ದೊಡ್ಡ ತಪ್ಪು...ಅದೂ ಕಪ್ಪು ಜನಾಂಗದಲ್ಲಿ! 

ವ್ಯತ್ಯಾಸ ಬಣ್ಣ ಮಾತ್ರ!

ಇಷ್ಟಕ್ಕೇ ಮುಗಿಯಲಿಲ್ಲ. ನನ್ನೆಲ್ಲಾ ಪ್ರತಿರೋಧದ ನಡುವೆ ನನ್ನನ್ನು ಒಂದು ಪಂಜರದೊಳಗೆ ಕೂಡಿಟ್ಟು  ಬೆತ್ತಲೆಯಾಗಿ ಸಾರ್ವಜನಿಕ ಪ್ರದರ್ಶನಕ್ಕಿಟ್ಟರು. ನಿತ್ಯ  ನೂರಾರು ಬಿಳಿಯರು ನೋಡಿ ಖುಷಿಪಡುತ್ತಿದ್ದರು. ನನ್ನ ನೋಡಲು ಟಿಕೆಟ್‌ಗಾಗಿ ಕ್ಯೂ ನಿಂತಿರುವುದನ್ನು ನೋಡಿ ಆ ಅನ್ಯಾಯದ ಪಂಜರದೊಳಗೆ ಹಾಕಿದ ಕಣ್ಣೀರು ಅಲ್ಲೇ ಬಂಧಿಯಾಗಿತ್ತು. ಕೇವಲ ಗಂಡಸರು ಮಾತ್ರವಲ್ಲ, ನನ್ನಂಥ ಹೆಣ್ಣು ಮನಸ್ಸುಗಳು ಅಲ್ಲಿದ್ದರು. ಆದರೆ ಅವರಿಗೂ ನನಗೂ ಮೇಲ್ನೋಟಕ್ಕೆ ಕಾಣುತ್ತಿದ್ದ  ವ್ಯತ್ಯಾಸ ಬಣ್ಣ ಮಾತ್ರ! ಅವರೂ ಬಟ್ಟೆ  ತೊಟ್ಟ ನಗ್ನರೇ! ಅದೇ ಪಂಜರದ ಸರಳುಗಳನ್ನು ಹಿಡಿದು ನಗ್ನತೆ ಮುಚ್ಚಲು ಅಹೋರಾತ್ರಿ ವ್ಯರ್ಥ ಹೋರಾಟ...ಚೀರಾಟ! ಎಲ್ಲಾ ಮುಗಿದು ಕೊನೆಗೆ ಮಿಕ್ಕಿದ್ದು ಅವಡಗಚ್ಚುವ ಮೌನ ಮಾತ್ರ!

ಅದೇ ಪಂಜರದಲ್ಲಿ ಪ್ರದರ್ಶನ
...
ಸಣ್ಣ ಬಣ್ಣ, ರೂಪ, ಆ ವಿಚಿತ್ರವಾದ ನೆರಿಗೆಯಿರುವ ಕೂದಲುಗಳನ್ನೇ ದುಡ್ಡಿನ ಬಂಡವಾಳವನ್ನಾಗಿಸಿಕೊಂಡ ಬಿಳಿಯರ ಗುಟ್ಟು ರಟ್ಟಾಗುತ್ತಿದ್ದಂತೆ, ನನ್ನನ್ನು ಫ್ರಾನ್ಸ್‌ಗೆ ಕಳುಹಿಸಲಾಗಿತ್ತು. ಮನಸ್ಸಿನಲ್ಲಿ ಪುಟ್ಟದೊಂದು ಆಸೆ ಚಿಗುರಿತ್ತು ಬಿಡುಗಡೆಯ ಆಸೆಯಿಂದ! ಆದರೆ, ಅಲ್ಲಿಯೂ ಅದೇ ಬದುಕಾಯಿತು. ಪದೇ ಪದೇ ಅತ್ಯಾಚಾರಕ್ಕೊಳಗಾದೆ, ವೇಶ್ಯೆಯಾದೆ. ಅಲಿಯೂ ಅದೇ ಪಂಜರ...ಅದೇ ಯಾರದ್ದೋ ಆಸೆಗೆ ನಾನು ಬೆತ್ತಲಾಗುವುದು! ನನ್ನ ಪುಟ್ಟ ಆಸೆಯೂ ಕಮರಿಹೋಗಿದೆ. ಇಲ್ಲಿ ಆಸೆಯೂ ಇಲ್ಲ, ಆಸರೆಯೂ ಇಲ್ಲ.

ಆಗ ನನ್ನ ಕಣ್ಣಿನಲ್ಲಿ ಕಣ್ಣೀರು ಎಂದೋ ಬತ್ತಿಹೋಗಿತ್ತು. ಅನ್ಯಾಯದ ವಿರುದ್ಧದ ದನಿ ಕುಗ್ಗಿಹೋಗಿತ್ತು. ನನಗೆ ಈಗ ದನಿ ಇಲ್ಲ. ಒಂದು ವೇಳೆ ದನಿ ಇದ್ದರೂ ಕೇಳುವ ಕಿವಿಗಳು ನನ್ನ ಬಳಿ ಇಲ್ಲ. ಅಪ್ಪ-ಅಮ್ಮನ ನೆನಪಾಗುತ್ತದೆ. ಲಂಡನ್‌ನ ನೆನಪುಗಳು ಆಗಾಗ ಸುಳಿಯುತ್ತವೆ. ಬದುಕು ಬೇಡ ಅನಿಸುತ್ತಿದೆ. ಆದರೂ, ನನ್ನ ಕೈಯಾರೆ ನಾನು ಕೊಲೆಯಾಗ ಬಯಸಲಾರೆ. ಎಲ್ಲವನ್ನೂ ಮರೆಯೋಕೆ ಕುಡಿತವನ್ನು ಬದುಕಾಗಿಸಿಕೊಂಡಿದ್ದೇನೆ. ಬಹುಶಃ ಅದೊಂದೇ ನನ್ನ ಜೀವನದಲ್ಲಿ ಕೊನೆಯವರೆಗೂ ಸಾಥ್ ನೀಡಿದ್ದು.
ನನ್ನ ಸಾವು ಸಮೀಪಿಸುತ್ತಿದೆ. ಕಪ್ಪು ಜನಾಂಗದ ಹೆಣ್ಣುಮಗಳಾಗಿ ಹುಟ್ಟಿದ್ದೇ ದೊಡ್ಡ ತಪ್ಪಾಯಿತು. ಸಣ್ಣವಳಿರುವಾಗ ಅಲ್ಲಿ-ಇಲ್ಲಿ ಕೇಳಿದ ವರ್ಣಭೇದ ನೀತಿ ಇಂದು ನಿಜವಾಗುತ್ತಿದೆ. ನೀವು ಹೆಣ್ಣು ಮಕ್ಕಳಾಗಿದ್ದರೆ ಅನ್ಯಾಯದ ವಿರುದ್ಧ  ಸೆಟೆದು ನಿಲ್ಲುವ ಶಕ್ತಿ ಇರಲಿ. ನನ್ನಿಂದಾಗದು ನಿಮ್ಮಿಂದಾಗಲಿ..

***********

ಇದು ನಿಜ ಕಥೆ. ಸಾರಾ ಸಾಯುವ ಕೊನೆಯ ಗಳಿಗೆಯಲ್ಲಿ ದಾಖಲೆಯಾಗಿಟ್ಟ ನುಡಿಗಳಿವು. ಸಾರಾಳ ಬದುಕು ಅಲ್ಲಿಗೇ ಕೊನೆಯಾಗಲಿಲ್ಲ. ಲಂಡನ್ ಮತ್ತು ಫ್ರಾನ್ಸ್‌ನ ಜನರು ಇವಳ ಮೇಲೆ ಯಾವ ಕನಿಕರವನ್ನೂ ತೋರಲಿಲ್ಲ. ಫ್ರಾನ್ಸ್‌ನಲ್ಲಿ ಅವಳ ಸಾವಾದಾಗ ಅವಳಿಗೆ ೨೫ನೇ ವಯಸ್ಸು.ಆದರೆ, ಸತ್ತ ಮೇಲೂ ಅವರು ಅವಳನ್ನು ಬಿಡಲಿಲ್ಲ. ಅವಳ ಮೂಳೆಗಳನ್ನು ಮತ್ತು ಜನನೇಂದ್ರಿಯಗಳನ್ನು  ಪ್ಯಾರೀಸ್‌ನ "ಮ್ಯೂಸಿ ದೆ ಐ ಹೆಮ್ಮೆ' ಎಂಬ ಸ್ಥಳದಲ್ಲಿ ಪ್ರದರ್ಶನಕ್ಕಿಟ್ಟರು. ಎರಡು ದಶಕಗಳಿಗೂ ಹೆಚ್ಚು ಕಾಲ ಸಾರಾಳ ದೇಹದ ಅಂಗಾಂಗಗಳನ್ನು ಈ ಮ್ಯೂಸಿಯಂನಲ್ಲಿ ಇಟ್ಟು ಖುಷಿಪಡುತ್ತಾರೆ.  ಕೋಟಿಗಟ್ಟಲೆ ಬಿಳಿಯ ಕ್ಷಕರು ದುಡ್ಡು ಕೊಟ್ಟು  ನೋಡಿ ಖುಷಿಪಟ್ಟರು.ಯಾರಿಗೂ ಅದು ಅಸಹ್ಯ ಅನಿಸಲೇ ಇಲ್ಲ.  ೨೦೦೨ರಲ್ಲಿ ಸಾರಾಳಿಗೆ ಫ್ರಾನ್ಸ್‌ನಿಂದ ಬಿಡುಗಡೆ ಸಿಕ್ಕಿತ್ತು, ಅಲ್ಲಲ್ಲ  ಅವಳ ಅಸ್ಥಿಪಂಜರಕ್ಕೆ! ಅವಳ ಕುಟುಂಬದ ತಲೆಮಾರೊಂದು ಈ ವಿರುದ್ಧ ಕಾನೂನು ಹೋರಾಟ ನಡೆಸಿದ್ದರ ಪರಿಣಾಮ ಅವಳ ದೇಹವನ್ನು .ಮತ್ತೆ ದಕ್ಷಿಣ ಆಫ್ರಿಕಾಕ್ಕೆ ನೀಡಲಾಗಿದೆ.

*****

ಆಕಸ್ಮಿಕ, ಅನಿವಾರ್ಯ ಸಾವುಗಳು ಮನುಷ್ಯನಿಗೆ ಖಚಿತ. ಆದರೆ, ಇವಳ ಸಾವು ಅನಿವಾರ್ಯವೂ ಅಲ್ಲ, ಆಕಸ್ಮಿಕವೂ ಅಲ್ಲ. ಇದೊಂದು ವಿಚಿತ್ರ ಸಾವು, ವಿಚಿತ್ರವಾದ ಶೋಷಣೆ. ಇದು ಅನ್ಯಾಯದಿಂದ ಮಾಡಿದ ಸಾವು. ಅವಳ ಕಥೆ ಕೇಳಿದಾಗ ಹೀಗಾಗಬಾರದಿತ್ತು ಎಂದು ಮನಸ್ಸು ಮರುಕ ಪಡುತ್ತೆ. ನಮ್ಮ ಸುತ್ತಮುತ್ತಲೇ ದಾಖಲೆಯಾಗದ ಇಂಥ ಅದೆಷ್ಟೋ ಕಣ್ಣೀರ ಕಥೆ-ವ್ಯಥೆಗಳಿರಬಹುದು.

ಕ್ಷಮಿಸಿ, ಇದು ನಿಮ್ಮ ನೆಮ್ಮದಿಯನ್ನು ಕಲಕುವ ಉದ್ದೇಶ.